ಬೈಕ್ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾದ ಖಾಸಗಿ ಬಸ್
ಶಿಕಾರಿಪುರ: ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಮಧ್ಯೆ ಉರುಳಿ ಬಿದ್ದ ಘಟನೆ ಶಿಕಾರಿಪುರ ಪಟ್ಟಣದ ಕುಮದ್ವತಿ ಕಾಲೇಜು ಮುಂಭಾಗ ಇಂದು ನಡೆದಿದೆ. ಅಪಘಾತದಲ್ಲಿ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಶಿವಮೊಗ್ಗದಿಂದ ಶಿಕಾರಿಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಕಾಲೇಜು ಮುಂಭಾಗದ ಹಂಪ್ ಬಳಿ ತಲುಪಿದಾಗ ಈ ಅನಾಹುತ ಸಂಭವಿಸಿದೆ. ಬಸ್ಸಿನ ಮುಂದೆ ಹೋಗುತ್ತಿದ್ದ ಬೈಕ್ ಸವಾರನು ಹಂಪ್ ತಪ್ಪಿಸಲು ಹಠಾತ್ತಾಗಿ ಬೈಕನ್ನು ಬಲಕ್ಕೆ ತಿರುಗಿಸಿದ್ದಾನೆ. ಈ ವೇಳೆ ಬೈಕ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ ಚಾಲಕ ಎಡಕ್ಕೆ ತಿರುಗಿಸಿದ್ದಾನೆ. ಆದರೆ, ಅದೇ ಕ್ಷಣದಲ್ಲಿ ಬೈಕ್ ಸವಾರ ಮತ್ತೆ ಎಡಕ್ಕೆ ಬಂದ ಕಾರಣ, ಆತನನ್ನು ಉಳಿಸಲು ಚಾಲಕ ಅನಿವಾರ್ಯವಾಗಿ ಬಸ್ಸನ್ನು ಮತ್ತೆ ಬಲಕ್ಕೆ ಸರಿಸಿದ್ದಾನೆ ಎಂದು ಹೇಳಲಾಗಿದೆ..
ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದೆ. ಸ್ಥಳೀಯರು, ದಾರಿಯಲ್ಲಿ ಹೋಗುತ್ತಿದ್ದ ಇತರೆ ವಾಹನ ಸವಾರರು ತಕ್ಷಣ ಗಾಯಾಳುಗಳನ್ನು ರಕ್ಷಿಸಿದ್ದಾರೆ. ತಕ್ಷಣವೇ ಅವರನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಶಿಕಾರಿಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Tags:
ಶಿಕಾರಿಪುರ ಸುದ್ದಿ