ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಸಿದ ಸರ್ಕಾರ - ಶಿಕ್ಷಣ ಸಚಿವರಿಂದ ಮಹತ್ವದ ಘೋಷಣೆ School

ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಸಿದ ಸರ್ಕಾರ - ಶಿಕ್ಷಣ ಸಚಿವರಿಂದ ಮಹತ್ವದ ಘೋಷಣೆ

ಒಂದನೇ ತರಗತಿಗೆ ದಾಖಲಾಗಲು ಕಡ್ಡಾಯವಾಗಿ 6 ವರ್ಷ ತುಂಬಿರಲೇಬೇಕು ಎಂಬ ನಿಯಮದಿಂದ ರಾಜ್ಯ ಸರ್ಕಾರ 2 ತಿಂಗಳ ಸಡಿಲಿಕೆ ನೀಡಿದ್ದು, ಲಕ್ಷಾಂತರ ಮಕ್ಕಳ ಪಾಲಕರಿಗೆ ಇದು ಅನುಕೂಲವಾಗಲಿದೆ..ಇಂದು ಸದನದಲ್ಲಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, 1ನೇ ತರಗತಿ ಮಕ್ಕಳ ದಾಖಲಾತಿಗೆ 6 ವರ್ಷದ ಮಿತಿಯನ್ನು ನಿಗದಿ ಮಾಡಲಾಗಿತ್ತು.

ಆ ನಿಯಮದಲ್ಲಿ ಸಡಿಲ ಮಾಡುವಂತೆ ಸಾಕಷ್ಟು ಮಕ್ಕಳ ಪಾಲಕರು ನಮ್ಮ ಬಳಿ ಮನವಿ ಮಾಡಿದ್ದರು. ಆ ಪಾಲಕರೆಲ್ಲ ಸ್ವಲ್ಪ ಗಾಬರಿಯಲ್ಲೂ ಇದಾರೆ. ಅವರ ಮನವಿಯನ್ನು ಪುರಸ್ಕರಿಸಿ ಸರ್ಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡುತ್ತಿದೆ ಎಂದರು. 

ಕರ್ನಾಟಕ ಶಿಕ್ಷಣ ಕಾಯ್ದೆ 1993ರ ಅಧ್ಯಾಯ 3 ಸೆಕ್ಷನ್​ 20ರ ಅಡಿಯಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡುವ ಸಂಬಂಧ 60 ದಿನಗಳ ವಿನಾಯಿತಿಯನ್ನು ನೀಡಲಾಗಿರುತ್ತದೆ. ಅದರಂತೆ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಗೆ ದಾಖಲಾತಿ ನೀಡುವ ಸಂಬಂಧ 60 ದಿನಗಳ ಸಡಿಲಿಕೆಯನ್ನು ನೀಡಲಾಗುತ್ತದೆ. ಈ ಸಂಬಂಧ ದಾಖಲಾತಿ ತಂತ್ರಾಂಶದಲ್ಲೂ ಬದಲಾವಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸದನದಲ್ಲಿ ಆದೇಶದ ಪ್ರತಿಯನ್ನು ಓದಿದರು. 

ಒಂದನೇ ತರಗತಿ ಮಕ್ಕಳಿಗೆ ಮಾತ್ರವಲ್ಲ, ಎಲ್​ಕೆಜಿ ಮತ್ತು ಯುಕೆಜಿ ಮಕ್ಕಳ ದಾಖಲಾತಿಯಲ್ಲೂ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅಲ್ಲಿಗೂ ಕೂಡ ಹೊಸದಾಗಿ ಒಂದು ಕಾನೂನನ್ನೂ ನಾವು ಆದಷ್ಟು ಬೇಗ ತಂದು, ಶಾಶ್ವತವಾಗಿ ಒಂದು ಪರಿಹಾರ ಕಂಡುಕೊಳ್ಳುತ್ತೇವೆ. ಸದ್ಯಕ್ಕೆ 6 ವರ್ಷದ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆಯನ್ನು ನೀಡಿದ್ದೇವೆ. ಈ ಮಾಹಿತಿಯನ್ನು ಎಲ್ಲ ಮಕ್ಕಳ ಪಾಲಕರಿಗೆ ಈ ಸದನದ ಮೂಲಕ ನಾನು ನೀಡುತ್ತಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿದರು.





Previous Post Next Post