ಬೈಕ್ ಅಪಘಾತ ; ಶಿಕ್ಷಕ ಸ್ಥಳದಲ್ಲೇ ಸಾ*ವು !
ರಿಪ್ಪನ್ಪೇಟೆ : ಎರಡು ಬೈಕ್ ಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಕೋಟೆತಾರಿಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಸಾವನ್ನಪ್ಪಿದ ಘಟನೆ ಇಲ್ಲಿನ ಶಿವಮೊಗ್ಗ ರಸ್ತೆಯ ಶಿವಮಂದಿರದ ಬಳಿ ನಡೆದಿದೆ.
ಮಂಜಯ್ಯ ಟಿ (59) ಮೃತ ಶಿಕ್ಷಕ. ಮೂಲತಃ ಹರಮಘಟ್ಟದವರಾದ ಇವರು ಅರಸಾಳುವಿನಲ್ಲಿ ವಾಸಿಸುತ್ತಿದ್ದರು. ಕೊಟೇತಾರಿಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತಿದ್ದರು.
ಕರ್ತವ್ಯ ಮುಗಿಸಿಕೊಂಡು ಅರಸಾಳು ಕಡೆಗೆ ತೆರಳುತಿದ್ದ ಶಿಕ್ಷಕ ಮಂಜಯ್ಯ ತಮ್ಮ ಟಿವಿಎಸ್ ಸ್ಟಾರ್ ಸಿಟಿ ಬೈಕ್ (KA14Z6775) ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಹಿರೋ ಹೋಂಡಾ ಸ್ಪೆಂಡರ್ (KA15V0159) ಬೈಕ್ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕೆಳಗೆ ಬಿದ್ದ ಮಂಜಯ್ಯನವರಿಗೆ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಸ್ಥಳೀಯರು ಆಟೋ ಮೂಲಕ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ ಆದರೆ ಅಷ್ಟರಲ್ಲಾಗಲೇ ಮಂಜಯ್ಯ ಕೊನೆಯುಸಿರೆಳೆದಿದ್ದರು. ಘಟನೆಯಲ್ಲಿ ಇನ್ನೊಂದು ಬೈಕ್ ನ ವ್ಯಕ್ತಿಗೆ ಸಣ್ಣ-ಪುಟ್ಟ ಗಾಯಗಳಾದ ಬಗ್ಗೆ ತಿಳಿದುಬಂದಿದೆ.
ಸ್ಥಳಕ್ಕೆ ರಿಪ್ಪನ್ಪೇಟೆ ಪಿಎಸ್ಐ ರಾಜುರೆಡ್ದಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Tags:
ಅಪಘಾತ ಸುದ್ದಿ