ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ, ಸಿಎಂಗೆ ಆಹ್ವಾನ ನೀಡಲಾಗಿದೆ: ರಾಘವೇಂದ್ರ ತಿರುಗೇಟು
ಶಿವಮೊಗ್ಗ: ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರಾಜಕೀಯ ಜಟಾಪಟಿ ಜೋರಾಗಿದೆ. ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದರೆ ಮುಖ್ಯಮಂತ್ರಿಯವರಿಗೆ ಶಿಷ್ಟಾಚಾರದ ಪ್ರಕಾರವೇ ಅಹ್ವಾನ ನೀಡಲಾಗಿದೆ ಎಂದು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯನವರ ಆರೋಪಕ್ಕೆ ಬಿವೈ ರಾಘವೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಗೌರವಯುತವಾಗಿ ಆಹ್ವಾನ ನೀಡಿದ್ದೇನೆ ಎಂದು ಹೇಳಿದ್ದಾರೆ
ಪೋಸ್ಟ್ನಲ್ಲಿ ಏನಿದೆ?
ಈ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮುಂಚಿತವಾಗಿ ಅಂದರೆ ಇದೇ ತಿಂಗಳ ಜುಲೈ 9 ರಂದು ಅಂಬಾರಗೋಡ್ಲು – ಕಳಸವಳ್ಳಿ – ಸಿಗಂದೂರು ಸೇತುವೆ ಉದ್ಘಾಟನೆಗೆ ನಾನು ಗೌರವಯುತವಾಗಿ ಆಹ್ವಾನ ನೀಡಿದ್ದೇನೆ. ಆದರೂ ಹಿರಿಯರಾದ ಸಿದ್ದರಾಮಯ್ಯ ಅವರು ಆಹ್ವಾನ ತಲುಪಿರುವುದು ತಡವಾಗಿದೆ ಎಂದು ಸಾರ್ವಜನಿಕವಾಗಿ ಹೇಳುತ್ತಿರುವುದು ಎಷ್ಟು ಸಮಂಜಸ.
ಶರಾವತಿ ನದಿಗೆ ಕಟ್ಟಿರುವ ಈ ಸೇತುವೆ ಆರು ದಶಕಗಳ ಸಾವಿರಾರು ಜನರ ಹೋರಾಟದ ಬೆವರಿನ ಪ್ರತಿಫಲ. ಇಷ್ಟು ಮಾತ್ರವಲ್ಲದೆ ಸಾವಿರಾರು ಜನರ ಭಾವನೆಗಳ ಪ್ರತಿರೂಪ. ಅವರೆಲ್ಲರ ಭಾವನೆಗಳಿಗೆ ಘಾಸಿ ಮಾಡಬೇಡಿ ಎಂದು ಮನವಿ ಮಾಡುತ್ತೇನೆ.
ವಿವಿಧ ವಿಚಾರಗಳಲ್ಲಿ ಪರಸ್ಪರ ರಾಜಕೀಯ ಮಾಡುವುದು ಸರಿ. ಆದರೆ ಆಹ್ವಾನ ಪತ್ರಿಕೆ ಮುಂಚಿತವಾಗಿ ತಲುಪಿಯು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಶರಾವತಿ ಹಿನ್ನೀರಿನ ಪ್ರದೇಶದ ಜನತೆಗೆ ನೀವು ಮಾಡುವ ಅವಮಾನ ಎಂದು ಭಾವಿಸುತ್ತೇನೆ. ಈ ಕೂಡಲೇ ರಾಜ್ಯದ ಜನತೆಯ ಮುಂದೆ ತಮ್ಮ ಹೇಳಿಕೆ ಹಿಂಪಡೆದು ನಿಜಾಂಶ ತಿಳಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸುತ್ತೇನೆ.
ಇಷ್ಟಲ್ಲದೆ, ಕೇಂದ್ರ ಭೂಸಾರಿಗೆ ಮಂತ್ರಾಲಯ ಸಚಿವರಾದ ನಿತಿನ್ ಗಡ್ಕರಿ ಅವರು ಇದೇ ತಿಂಗಳ ಜುಲೈ 11 ರಂದು ಖುದ್ದು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಧಿಕೃತವಾಗಿ ಆಹ್ವಾನ ನೀಡಿರುತ್ತಾರೆ ಎಂಬುದನ್ನು ಕ್ಷೇತ್ರದ ಜನತೆಯ ಗಮನಕ್ಕೆ ತರಲು ಇಚ್ಛಿಸುತ್ತೇನೆ.
Tags:
ಸಿಗಂದೂರು ಬಿ ವೈ ರಾಘವೇಂದ್ರ