ಭದ್ರಾವತಿಯಲ್ಲಿ ಕ್ರಿಕೆಟ್ ಕಿರಿಕ್ : ಯುವಕನ ಹ*ತ್ಯೆ, ಮತ್ತೋರ್ವನಿಗೆ ಗಾಯ! Crime

 ಭದ್ರಾವತಿಯಲ್ಲಿ ಕ್ರಿಕೆಟ್ ಕಿರಿಕ್ : ಯುವಕನ ಹ*ತ್ಯೆ, ಮತ್ತೋರ್ವನಿಗೆ ಗಾಯ!






ಭದ್ರಾವತಿ : ಕ್ರಿಕೆಟ್ ವಿಚಾರದಲ್ಲಿ ಯುವಕರ ನಡುವೆ ಉಂಟಾದ ಕಲಹ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ, ಭದ್ರಾವತಿ ನಗರದ ಅಶ್ವಥ್ ನಗರದಲ್ಲಿ ಮೇ 5 ರ ರಾತ್ರಿ ನಡೆದಿದೆ.

ಭದ್ರಾವತಿ ಅಶ್ವಥ್ ನಗರದ ನಿವಾಸಿ, ಲಾರಿ ಚಾಲಕ ವೃತ್ತಿ ಮಾಡಿಕೊಂಡಿದ್ದ ಅರುಣ್ (23) ಕೊಲೆಗೀಡಾದ ಯುವಕ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತುಮಕೂರು ಜಿಲ್ಲೆಯ ನಿವಾಸಿ ಸಂಜಯ್ (20) ಎಂಬ ಯುವಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಇತ್ತೀಚೆಗೆ ಭದ್ರಾವತಿಯ ಸಂಬಂಧಿಯೋರ್ವರ ಮನೆಗೆ ಆಗಮಿಸಿದ್ದ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಸಬ್ ಇನ್ಸ್’ಪೆಕ್ಟರ್ ಕೃಷ್ಣಕುಮಾರ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.

ಘಟನೆ ಹಿನ್ನಲೆ : ಮೇ 5 ರ ಸಂಜೆ ಕೊಲೆಗೀಡಾದ ಅರುಣ್ ಸೇರಿದಂತೆ ಪರಿಚಯಸ್ಥ ಯುವಕರು ಕ್ರಿಕೆಟ್ ಆಟವಾಡಿದ್ದರು. ಈ ವೇಳೆ ಕ್ರಿಕೆಟ್ ವಿಚಾರದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು. ನಂತರ ಕಲಹ ತಣ್ಣಗಾಗಿತ್ತು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾತ್ರಿ ಗಾಯಾಳು ಸಂಜಯ್ ಮತ್ತೀತರ ಮರ್ನಾಲ್ಕು ಜನ ಯುವಕರು, ಅರುಣ್ ಮೊಬೈಲ್ ಪೋನ್ ಗೆ ಕರೆ ಮಾಡಿ ಅಶ್ವಥ್ ನಗರದ ಡಬ್ಬಲ್ ಟ್ಯಾಂಕ್ ಬಳಿ ಕರೆಯಿಸಿಕೊಂಡಿದ್ದರು. ಅರುಣ್ ಹಾಗೂ ಎದುರಾಳಿ ಯುವಕರ ನಡುವೆ ಮತ್ತೆ ಗಲಾಟೆಯಾಗಿದೆ.

ಇದು ವಿಕೋಪಕ್ಕೆ ತಿರುಗಿ ಎದುರಾಳಿ ಗುಂಪಿನವರು ಅರುಣ್ ಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ. ಈ ಕಲಹದಲ್ಲಿ ಸಂಜಯ್ ತಲೆಗೆ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿದೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Previous Post Next Post