ಜಮ್ಮು ಕಾಶ್ಮೀರದ ಪ್ರಕರಣ - ತೀರ್ಥಹಳ್ಳಿ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟದಿಂದ ಖಂಡನೆ tth

 ಜಮ್ಮು ಕಾಶ್ಮೀರದ ಪ್ರಕರಣ - ತೀರ್ಥಹಳ್ಳಿ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟದಿಂದ ಖಂಡನೆ







ತೀರ್ಥಹಳ್ಳಿ : ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಮ್‌ ಬೈಸರನ್ ವ್ಯಾಲಿಯಲ್ಲಿ ಮಂಗಳವಾರ ಮಧ್ಯಾಹ್ನ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯನ್ನು ತೀರ್ಥಹಳ್ಳಿ ತಾಲ್ಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟ ತೀರ್ಥಹಳ್ಳಿಯ ಜಾಮೀಯಾ ಆಡಳಿತ ಮಂಡಳಿ ತೀವ್ರವಾಗಿ ಖಂಡಿಸುತ್ತದೆ.

ಈ ದೇಶದ್ರೋಹಿ ಮನುಕುಲದ ವಿರೋಧಿಗಳಾದ ಯಾವುದೇ ವ್ಯಕ್ತಿ / ಸಂಘಟನೆ ನಡೆಸಿದ ಈ ಪೈಶಾಚಿಕ ಹೇಯ ಕೃತ್ಯ ನಿಜಕ್ಕೂ ಕಣ್ಣಿರು ತರಿಸುತ್ತದೆ. ಈ ದೇಶದ್ರೋಹಿ ಸಮಾಜಘಾತುಕರು ಪ್ರವಾಸಿಗಳನ್ನು ನಿರ್ಧಾಕ್ಷಿಣ್ಯವಾಗಿ ಗುಂಡಿಕ್ಕಿ ಕೊಂದಿರುವುದು ಇಡೀ ದೇಶವೇ ಬೆಚ್ಚಿಬಿದ್ದಿದೆ. ಭೂಸ್ವರ್ಗವೆಂದೇ ಖ್ಯಾತಿ ಪಡೆದಿರುವ ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರು ಕೇವಲ ಒಂದು ಧರ್ಮೀಯರನ್ನು ಗುರಿಯಾಗಿಸಿಕೊಂಡು ಹತ್ಯೆ ಎಸಗಿರುವುದು ದೇಶದ ದುರಂತವೇ ಸರಿ.

ಇದನ್ನು ದೇಶದ ಎಲ್ಲಾ ಸಮುದಾಯದ ಪ್ರತಿಯೊಬ್ಬ ಪ್ರಜೆಯೂ ಖಂಡಿಸಬೇಕಾದ ಕೃತ್ಯ. 28 ಜನ ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಈ ಕೃತ್ಯದಲ್ಲಿ ಪ್ರಾಣ ಕಳೆದುಕೊಂಡ ಮೂಲತ: ತೀರ್ಥಹಳ್ಳಿಯವರಾದ ಶಿವಮೊಗ್ಗದ ಮಂಜುನಾಥ್‌ರಾವ್, ಬೆಂಗಳೂರಿನ ಭರತ್ ಭೂಷಣ್ ಹಾಗೂ ಎಲ್ಲಾ ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಮೃತರ ಮೃತರ ಕುಟುಂಬಗಳಿಗೆ ದು:ಖವನ್ನು ಸೈರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಭಯೋತ್ಪಾದನೆ ಮತ್ತು ದೇಶದ್ರೋಹಿ ಚಟುವಟಿಕೆಗಳಲ್ಲಿ ನಿರತರಾಗಿರುವ ವ್ಯಕ್ತಿ ಮತ್ತು ಸಂಘಟನೆಗಳನ್ನು ಸಂಪೂರ್ಣ ಮಟ್ಟ ಹಾಕುವ ಅಗತ್ಯವಿದೆ. ದೇಶದ ಎಲ್ಲಾ ಸಮುದಾಯದ ಪ್ರಜೆಗಳು ಇಂತಹ ಭಯೋತ್ಪಾದನೆ ಮಟ್ಟ ಹಾಕುವಲ್ಲಿ ಸಂಘಟಿತರಾಗುವ ಅವಶ್ಯಕತೆಯೂ ಇದೆ. ಈ ಪೈಶಾಚಿಕ ಕೃತ್ಯ ನಡೆಸಿದ ಯಾರೇ ಆಗಿರಲಿ, ಸರ್ಕಾರ ಅವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಬೇಕೆಂದು ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಗ್ರಹಿಸುತ್ತಿದ್ದೇವೆ ಎಂದು ತಹಸೀಲ್ದಾರ್ ಗೆ ಮನವಿ ಸಲ್ಲಿಸಿದ್ದಾರೆ.







Previous Post Next Post