ಪಂಚಭೂತಗಳಲ್ಲಿ ಲೀನವಾದ ಮಂಜುನಾಥ ರಾವ್..!
ಶಿವಮೊಗ್ಗ : ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಮಗ ಅಭಿಜೈನಿಂದ ವಿಧಿ ವಿಧಾನಗಳನ್ನ ಪೂರೈಸಿ ಮಂಜುನಾಥ ರಾವ್ ಅವರ ಚಿತೆಗೆ ಬೆಂಕಿಯಿಡಲಾಗಿದೆ. ಪತ್ನಿ ಪಲ್ಲವಿಯವರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಧ್ಯಾಹ್ನ 12:30 ರ ಸುಮಾರಿಗೆ ಹೊರಟ ಮಂಜುನಾಥರ ಪಾರ್ಥೀವ ಶರೀರದ ಅಂತಿಮ ಯಾತ್ರೆ 3 ಗಂಟೆಗೆ ರೋಟರಿ ಚಿತಾಗಾರ ತಲುಪಿತು. ನಂತರ ಅಲ್ಲಿ ಕೆಲವು ವಿಧಿವಿಧಾನಗಳನ್ನು ಪೂರೈಸಿ ಮಂಜುನಾಥ್ ರಾವ್ ಅಂತ್ಯಸಂಸ್ಕಾರ ಮಾಡಲಾಯಿತು..
ರೋಟರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರಕ್ಕೂ ಮುನ್ನ ಜಿಲ್ಲಾಡಳಿತ ವತಿಯಿಂದ ಸರ್ಕಾರಿ ಗೌರವ ಸಲ್ಲಿಕೆಯಾಗಿ ಮೂರು ಸುತ್ತುಗಳ ಕುಶಾಲ ತೋಪು ಹಾರಿಸಿ ಪೊಲೀಸರು ಗೌರವ ವಂದನೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕುಶಾಲತೋಪು ಹಾರಿಸಲಾಯಿತು.
ಗೌರವ ವಂದನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಡಿಸಿ ಗುರುದತ್ ಹೆಗಡೆ, ಎಸ್ಪಿ ಜಿ.ಕೆ. ಮಿಥುನ ಕುಮಾರ್, ಪೂರ್ವ ವಲಯ ಐಜಿಪಿ ರವಿ ಕಾಂತೇಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
