ಸಾವಿನಲ್ಲು ಸಾರ್ಥಕತೆ ಮೆರೆದ ಬಾಲಕ, ಅಪಘಾತದಲ್ಲಿ ಮೃತಪಟ್ಟಿದ್ದ ಬಾಲಕನ ಬಹು ಅಂಗಾಂಗ ದಾನ
ಶಿರಾಳಕೊಪ್ಪ: ಅಪಘಾತದಲ್ಲಿ ಪುತ್ರನನ್ನು ಕಳೆದುಕೊಂಡ ದಂಪತಿ ಆತನ ಸಾವಿನ ನಡುವೆಯೂ ಮಾನವೀಯತೆ ಮೆರೆದಿದ್ದಾರೆ. ಪಟ್ಟಣದ ಆನವಟ್ಟಿ ರಸ್ತೆಯ ರೂಪಾ ಮತ್ತು ಕುಮಾರ್ ದಂಪತಿ ಪುತ್ರ ಗಿರೀಶ್ (16) ಬಹು ಅಂಗಾಂಗ ದಾನದ ಮೂಲಕ ಸಾರ್ಥಕತೆಗೆ ಸಾಕ್ಷಿ ಯಾಗಿದ್ದಾರೆ.
ಫೆ. 24ರಂದು ಹಾವೇರಿ ಜಿಲ್ಲೆಯ ಹಿರೆಕೆರೂರು ಸಮೀಪದ ತಾವರಗಿ ಗ್ರಾಮದ ಬಳಿ ಬೈಕ್ ಮತ್ತು ಟ್ರ್ಯಾಕ್ಟರ್ ಅಪಘಾತದಲ್ಲಿ ಗಿರೀಶ್ ತೀವ್ರ ಗಾಯಗೊಂಡಿದ್ದರು. ಇವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಒಂದು ವಾರ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗಲಿಲ್ಲ. ಸಹಾಯಹಸ್ತ ಚಾಚಿದರೂ ಅಂದಾಜು 8-10 ಲಕ್ಷ ರೂ. ಖರ್ಚಾಗಿದ್ದರಿಂದ ಸಾಲ ಮಾಡಿ ಆಸ್ಪತ್ರೆ ಶುಲ್ಕ ಪಾವತಿಸಲಾಗಿತ್ತು. ಅಲ್ಲಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಾಲ್ಕು ದಿನಗಳ ನಂತರ ಬಾಲಕ ಕೊನೆಯುಸಿರು ಎಳೆದಿದ್ದಾರೆ.
ಸಾವಿನ ನೋವಿನಲ್ಲೂ ದಂಪತಿಗಳು ಮಗ ಗಿರೀಶನ ಕಿಡ್ನಿ, ಹಾರ್ಟ್, ಲಿವರ್, ಲಂಗ್ಸ್ ದಾನ ಮಾಡಿದ್ದಾರೆ. ಶನಿವಾರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ತಂದು ಪಟ್ಟಣದಲ್ಲಿ ಮೆರವಣಿಗೆ ಮೂಲಕ ಸೊರಬ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.
Tags:
ಶಿರಾಳಕೊಪ್ಪ ಸುದ್ದಿ