ಮದುವೆ ಆಮಂತ್ರಣಕ್ಕೆ ತೆರಳಿದ ಕಾರು ಬೆಂಕಿಗಾಹುತಿ - ಬೆಳ್ಳೂರು ರಸ್ತೆ ಮಧ್ಯೆ ಧಗಧಗನೆ ಹೊತ್ತಿ ಉರಿದ ಕಾರು!
ರಿಪ್ಪನ್ಪೇಟೆ : ಸಮೀಪದ ಬೆಳ್ಳೂರು ಗ್ರಾಮದಲ್ಲಿ ಶನಿವಾರ ರಾತ್ರಿ ಸಂಚಲನಕಾರಿ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲವೇ ಕ್ಷಣಗಳಲ್ಲಿ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಕಾರು ದ್ಯಾಮ್ಲಾಪುರ ಗ್ರಾಮದ ಶ್ರೀಕಾಂತ್ ಎಂಬುವವರಿಗೆ ಸೇರಿದ್ದು ಅದೃಷ್ಟಾವಶಾತ್ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ.
ಘಟನೆ ಹಿನ್ನಲೆ ಏನು..!!??
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದ್ಯಾಮ್ಲಾಪುರ ಗ್ರಾಮದ ಶ್ರೀಕಾಂತ್ ತಮ್ಮ ತಂಗಿಯ ಮದುವೆಯ ಹಿನ್ನಲೆಯಲ್ಲಿ ತಮ್ಮ ದೊಡ್ಡಪ್ಪನವರಾದ ಗಂಗಾಧರಗೌಡ ಎಂಬುವವರೊಂದಿಗೆ ವಿವಾಹ ಆಮಂತ್ರಣ ಪತ್ರಿಕೆ ನೀಡಲು ಮಾರುತಿ ಓಮಿನಿ ಕಾರಿನಲ್ಲಿ ಶಿವಮೊಗ್ಗಕ್ಕೆ ತೆರಳಿ ಹಿಂದಿರುಗುತಿದ್ದ ವೇಳೆಯಲ್ಲಿ ಶನಿವಾರ ರಾತ್ರಿ ಸುಮಾರು 10.20 ರ ಸಮಯದಲ್ಲಿ ಬೆಳ್ಳೂರು ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಶಿಕ್ಷಕ ಸುರೇಶ್ ಎಂಬುವವರ ಮನೆ ಮುಂದೆ ಮಾರುತಿ ಓಮಿನಿ ಕಾರಿನಲ್ಲಿ ವೈರ್ ಶಾರ್ಟ್ ಸರ್ಕ್ಯೂಟ್ ಆಗಿ ಮೊದಲು ಹೊಗೆ ಕಾಣಿಸಿಕೊಂಡಿದ್ದು, ಬಳಿಕ ಕ್ಷಣಾರ್ಧದಲ್ಲಿ ಬೆಂಕಿ ಜ್ವಾಲೆಗಳು ಎದ್ದಿವೆ.
ಕೂಡಲೇ ಇಬ್ಬರು ಹೊರಗೆ ಇಳಿದು ಓಡಿದ್ದಾರೆ. ಆಗ ನೋಡ ನೋಡುತಿದ್ದಂತೆ ಬೆಂಕಿ ಕಾರನ್ನೆಲ್ಲಾ ಆವರಿಸಿ, ಕಣ್ಣೆದುರೇ ಕಾರು ಹಾಗೂ ಕಾರಿನಲ್ಲಿದ್ದ ತರಕಾರಿ , ಸೀರೆ ಮತ್ತು ಬಟ್ಟೆಗಳು ಸುಟ್ಟು ಭಸ್ಮವಾಗಿದೆ.
ರಸ್ತೆ ಮಧ್ಯದಲ್ಲಿಯೇ ಧಗಧಗನೆ ಹೊತ್ತಿ ಉರಿದ ಕಾರಿನ ದೃಶ್ಯವನ್ನು ಕಂಡು ಸ್ಥಳೀಯರು ತಕ್ಷಣವೇ ಸಹಾಯಕ್ಕೆ ಧಾವಿಸಿದ್ದು, ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಆದರೆ ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ.
ವಿಷಯ ತಿಳಿಯುತಿದ್ದಂತೆ ರಿಪ್ಪನ್ ಪೇಟೆ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ : ರಫಿ ರಿಪ್ಪನ್ ಪೇಟೆ
Tags:
ರಿಪ್ಪನ್ ಪೇಟೆ ಸುದ್ದಿ