ತೀರ್ಥಹಳ್ಳಿ-ಮಂಗಳೂರು ಸೇರಿ 3 ರೈಲ್ವೆ ಮಾರ್ಗದ ಒಪ್ಪಿಗೆಗೆ ಎಂಪಿ ರಾಘವೇಂದ್ರ ಆಗ್ರಹ
ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ರೈಲ್ವೆ ಸಚಿವರಿಗೆ ಒತ್ತಾಯ
ಶಿವಮೊಗ್ಗ : ಮಲೆನಾಡಿನ ಜನರಿಗೆ ಅನುಕೂಲವಾಗಲು ಮೂರು ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.
ಲೋಕಸಭೆಯಲ್ಲಿ ನಡೆದ ರೈಲ್ವೆ ಇಲಾಖೆಯ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತಾಳಗುಪ್ಪ-ಸೊರಬ-ಸಿದ್ದಾಪುರ-ಹುಬ್ಬಳ್ಳಿ ಮಾರ್ಗಕ್ಕೆ ಅನುಮೋದನೆ ಕೊಡಬೇಕು ಇದರಿಂದ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗಲಿದೆ. ಶಿವಮೊಗ್ಗ-ತೀರ್ಥಹಳ್ಳಿ-ಮಂಗಳೂರು ಮಾರ್ಗ ಹಾಗೂ ಭದ್ರಾವತಿ-ಚಿಕ್ಕಜಾಜೂರು ಮಾರ್ಗಕ್ಕೆ ಒಪ್ಪಿಗೆ ಕೊಡಬೇಕು ಎಂದು ಆಗ್ರಹಿಸಿದರು. ಶಿವಮೊಗ್ಗ -ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ಕಾಮಗಾರಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ರಾಜ್ಯ ಸರ್ಕಾರದಿಂದ ಶೇ 50 ಪಾಲು ಹಾಗೂ ಉಚಿತ ಭೂಮಿ ನೀಡುವುದಾಗಿ ಭರವಸೆ ನೀಡಿದ್ದರು.
ಆದರೆ, ರಾಜ್ಯ ಸರ್ಕಾರ ಭೂಮಿ ನೀಡದ ಕಾರಣ ಸಮಸ್ಯೆ ಉಂಟಾಗಿದೆ. ರಾಜ್ಯ ಸರ್ಕಾರ ಶೀಘ್ರ ಭೂಮಿ ಒದಗಿಸಿ ಯೋಜನೆ ಪೂರ್ಣಗೊಳಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಬೀರೂರು- ಶಿವಮೊಗ್ಗ ಜೋಡಿ ಹಳಿ ಮಾರ್ಗಕ್ಕೆ ಆಡಳಿತಾತ್ಮಕ ಅನುಮೋದನೆ ಕೊಡಬೇಕು ಎಂದು ಅವರು ಆಗ್ರಹಿಸಿದರು. 2014 ರ ಮೊದಲು ರಾಜ್ಯದಲ್ಲಿ ರೈಲ್ವೆ ಕಾಮಗಾರಿಗಳಿಗೆ ವರ್ಷಕ್ಕೆ 835 ಕೋಟಿ ಬಿಡುಗಡೆ ಆಗುತ್ತಿತ್ತು. ಈ ವರ್ಷ ರಾಜ್ಯಕ್ಕೆ 7748 ಕೋಟಿ ದೊರಕಿದೆ’ ಎಂದರು.
Tags:
ಶಿವಮೊಗ್ಗ ಸುದ್ದಿ