ನಿಯಂತ್ರಣ ತಪ್ಪಿ ನದಿಗೆ ಉರುಳಿದ ಕಾರು- ಓರ್ವ ಮಹಿಳೆ ಸಾವು..! TTH

ನಿಯಂತ್ರಣ ತಪ್ಪಿ ನದಿಗೆ ಉರುಳಿದ ಕಾರು- ಓರ್ವ ಮಹಿಳೆ ಸಾವು..!
ತೀರ್ಥಹಳ್ಳಿ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ನದಿಗೆ ಉರುಳಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಮಂಡಗದ್ದೆ ಬಳಿ ನಡೆದಿದೆ.

ಮೃತ ಮಹಿಳೆಯನ್ನು ಕುಂದಾಪುರದ ತಾಲ್ಲೂಕಿನ
ತೆಕ್ಕಟ್ಟೆ ಗ್ರಾಮದ ನಿವಾಸಿ ಸವಿತಾ ದೇವಾಡಿಗ (57)
ಎಂದು ತಿಳಿದುಬಂದಿದೆ. ತೆಕ್ಕಟ್ಟೆಯ ಶಂಕರ
ದೇವಾಡಿಗ ಅವರು ತಮ್ಮ ಮಾರುತಿ ಸ್ವಿಫ್ಟ್
ಕಾರಿನಲ್ಲಿ ಕುಟುಂಬದ ಆರು ಮಂದಿ ಸದಸ್ಯರೊಂದಿಗೆ ಶಿವಮೊಗ್ಗದಲ್ಲಿರುವ ಮಗಳ ಮನೆಗೆ ತೆರಳುತ್ತಿದ್ದರು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಂಡಗದ್ದೆ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ರಸ್ತೆ
ಪಕ್ಕದಲ್ಲಿದ್ದ ನದಿಗೆ ಉರುಳಿದೆ.

ಕಾರು ನದಿಯ ನೀರಿನಲ್ಲಿ ಮುಳುಗುತಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ರಕ್ಷಣೆಗೆ ಧಾವಿಸಿ 6 ಜನರನ್ನು ರಕ್ಷಿಸಿದ್ದಾರೆ. ಆದರೆ ಶಂಕರ ದೇವಾಡಿಗ ಅವರ ಪತ್ನಿ ಸವಿತಾ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅಪಘಾತದಲ್ಲಿ ಪೆಟ್ಟಾಗಿ ಸಾವಿಗಿಡಾಗಿದ್ದಾರೆ. ಶಂಕರ ದೇವಾಡಿಗ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಪುತ್ರರಾದ ಅರುಣ್
ದೇವಾಡಿಗ ಮತ್ತು ಅಶ್ವತ್ಥ ದೇವಾಡಿಗ, ಪುತ್ರಿ ಅಮೃತಾ, ಅಳಿಯ ಸುರೇಶ್ ದೇವಾಡಿಗ ಹಾಗೂ ಎರಡೂವರೆ ವರ್ಷದ ಮೊಮ್ಮಗ ಅಭಿಶ್ರೇಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕ್ರೇನ್ ಸಹಾಯದಿಂದ ನದಿಯಿಂದ ಹೊರತೆಗೆಯಲಾಗಿದೆ ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು
ದಾಖಲಾಗಿದೆ.
Previous Post Next Post