ಸೀಬಿನಕೆರೆಯ ಶಾಲೆಯ ವಿದ್ಯಾರ್ಥಿಗಳಿಗೆ ರಾಜಮನೆ ಫೌಂಡೇಶನ್ ವತಿಯಿಂದ ನೋಟ್ ಬುಕ್ ವಿತರಣೆ
ತೀರ್ಥಹಳ್ಳಿ : ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ರಾಜಮನೆ ಫೌಂಡೇಶನ್ (ರಿ ) ಎಂಬ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಲು ತೀರ್ಮಾನಿಸಿ ಈಗಾಗಲೇ ಹಲವಾರು ಶಾಲೆಗಳಲ್ಲಿ ನೋಟ್ ಬುಕ್ ವಿತರಣೆ ಮಾಡಿದ್ದು ಇಂದು ತೀರ್ಥಹಳ್ಳಿಯ ಸೀಬಿನಕೆರೆಯ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.
ರಾಜಮನೆ ಫೌಂಡೇಶನ್ ಸಂಸ್ಥೆಯಿಂದ ನೀಡಲಾದ ನೋಟ್ ಬುಕ್ ಅನ್ನು ತಹಸೀಲ್ದಾರ್ ರಂಜಿತ್ ಕೆ ಎಸ್ ಹಾಗೂ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ವಿತರಣೆ ಮಾಡಿದರು.
ತಹಸೀಲ್ದಾರ್ ರಂಜಿತ್ ಕೆ ಎಸ್ ಮಾತನಾಡಿ ವಿದ್ಯಾರ್ಥಿಗಳು ನಾನು ಮೊದಲು ಬಂದೆ ಎರಡನೇ ಬಂದೆ ಎಂದು ಹೇಳಿಕೊಳ್ಳುವುದಕ್ಕಿಂತ ನಂತರ ಏನೆಲ್ಲಾ ಮಾಡಿದ್ದೀವಿ ಎಂಬುದು ಮುಖ್ಯ, ಮಾನವೀಯತೆ ಎಂಬುದು ಎಲ್ಲರಲ್ಲೂ ಇರಬೇಕು, ನೀವು ಎಲ್ಲಾ ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಸರ್ಕಾರಿ ಅಧಿಕಾರಿಗಳು, ಪೊಲೀಸ್, ಹಾಗೆ ಪತ್ರಿಕಾ ಮಿತ್ರರಂತೆ ದೊಡ್ಡ ಹುದ್ದೆ ಅಲಂಕರಿಸಿ, ನೀವು ಮುಂದೆ ಹೀಗೆ ರಾಜಮನೆ ಫೌಂಡೇಶನ್ ನಂತಹ ದೊಡ್ಡ ಫೌಂಡೇಶನ್ ಸ್ಥಾಪಿಸಿ ಎಲ್ಲರಿಗೂ ಸಹಾಯ ಮಾಡಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಆಸಾದಿ ಮಾತನಾಡಿ ನಾನು ಇದೆ ಶಾಲೆಯಲ್ಲಿ ಓದಿದ್ದು, ಈ ಶಾಲೆ ಮುಚ್ಚುವ ಹಂತಕ್ಕೆ ಸಹ ಹೋಗಿತ್ತು, ಆದರೆ ಈಗ ಈ ಶಾಲೆ ತಾಲೂಕಿಗೆ ಹೆಸರಾಂತ ಶಾಲೆಯಾಗಿದೆ. ಖಾಸಗಿ ಶಾಲೆಗೆ ಸ್ಪರ್ಧೆ ನೀಡುವ ಕೆಲಸ ಸೀಬಿನಕೆರೆಯ ಸರ್ಕಾರಿ ಶಾಲೆ ಮಾಡುತ್ತಿದೆ. ಇಲ್ಲಿ ಕೆಲವೊಂದು ಮೂಲಭೂತ ಸೌಕರ್ಯ ಬೇಕು ಎಂದು ತಿಳಿದುಬಂದಿದೆ. ಅದನ್ನು 17 ರಂದು ನಡೆಯುವ ಸಭೆಯಲ್ಲಿ ಮಂಜೂರು ಮಾಡುವುದಾಗಿ ಆಶ್ವಾಸನೆ ನೀಡಿದರು.
ರಾಜಮನೆ ಫೌಂಡೇಶನ್ ಸಂಸ್ಥೆಯ ಸಂತೋಷ್ ಎಷ್ಟೋ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದ್ದೇವೆ. ಆದರೆ ಇಲ್ಲಿ ಇರುವ ವಿದ್ಯಾರ್ಥಿಗಳನ್ನು ನೋಡಿ ಬಹಳ ಸಂತಸವಾಯಿತು. ಎಷ್ಟೋ ಸರ್ಕಾರಿ ಶಾಲೆಗಳು ಮುಚ್ಚಿಹೋಗುತ್ತಿವೆ. ಆದರೆ ಇಲ್ಲಿ ಖಾಸಗಿ ಶಾಲೆಯನ್ನು ಮೀರಿಸಿ ಎಲ್ಲಾ ವ್ಯವಸ್ಥೆ ಇರುವುದು ನೋಡಿ ಬಹಳ ಖುಷಿಯಾಯಿತು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಜೇಶ್, ಮಹಾಬಲೇಶ್ವರ ಹೆಗಡೆ, ಮುಖ್ಯ ಶಿಕ್ಷಕಿ ಸಾವಿತ್ರಿ, ನಾಗರಾಜ್, ರಾಜಮನೆ ಫೌಂಡೇಶನ್ ಸಂಸ್ಥೆಯ ರೇವಂತ್ ಭೂಷಣ್ ಸೇರಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಇದ್ದರು.
Tags:
ಸೀಬಿನಕೆರೆ ಶಾಲೆ