ನೆಟ್‌ವರ್ಕ್ ವೈಫಲ್ಯಕ್ಕೆ ಸಿಡಿದೆದ್ದ ಜನರು – BSNL ಪ್ರತಿಕೃತಿಗೆ ‘ಭಾವಪೂರ್ಣ ಶ್ರದ್ಧಾಂಜಲಿ’ ಪ್ಲೆಕ್ಸ್

ನೆಟ್‌ವರ್ಕ್ ವೈಫಲ್ಯಕ್ಕೆ ಸಿಡಿದೆದ್ದ ಜನರು – BSNL ಪ್ರತಿಕೃತಿಗೆ ‘ಭಾವಪೂರ್ಣ ಶ್ರದ್ಧಾಂಜಲಿ’ ಪ್ಲೆಕ್ಸ್

ಹೊಸನಗರ : ಭಾರತದ ಅತಿ ದೊಡ್ಡ ಹಾಗೂ ಪುರಾತನ ದೂರಸಂಪರ್ಕ ಸಂಸ್ಥೆಯಾದ ಬಿಎಸ್‌ಎನ್‌ಎಲ್ (BSNL) ನೆಟ್‌ವರ್ಕ್ ಸಮಸ್ಯೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಿರಂತರ ಮೊಬೈಲ್ ನೆಟ್‌ವರ್ಕ್ ವ್ಯತ್ಯಯಗಳ ನಡುವೆಯೂ ಸಮಸ್ಯೆ ಬಗೆಹರಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆ ಹೊಸನಗರ ತಾಲೂಕಿನ ಹುಂಚ ಗ್ರಾಮದ ಸಾರ್ವಜನಿಕರು ತಮ್ಮ ಆಕ್ರೋಶವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದು, ಬಿಎಸ್‌ಎನ್‌ಎಲ್ ಪ್ರತಿಕೃತಿಯ ಮೇಲೆ ‘ಬಿಎಸ್‌ಎನ್‌ಎಲ್‌ಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂಬ ಪ್ಲೆಕ್ಸ್ ಅಳವಡಿಸಿದ್ದಾರೆ. ಹೊಂಬುಜ ಮಠಕ್ಕೆ ತೆರಳುವ ರಸ್ತೆಯಲ್ಲಿ ಈ ಪ್ಲೆಕ್ಸ್ ನ್ನು ಅಳವಡಿಸಿದ್ದಾರೆ. ಇಲ್ಲಿ ಬಳಸಿರುವ “ನೆಟ್‌ವರ್ಕ್‌ಗೆ ಭಾವಪೂರ್ಣ ಶ್ರದ್ಧಾಂಜಲಿ” ಎಂಬ ಪದಬಳಕೆ ನಿಜವಾದ ಶ್ರದ್ಧಾಂಜಲಿ ಅಲ್ಲ; ಬದಲಾಗಿ, ಮೊಬೈಲ್ ಹಾಗೂ ಇತರೆ ಸಂವಹನ ಸೇವೆಗಳ ಸಂಪೂರ್ಣ ವೈಫಲ್ಯಕ್ಕೆ ಜನರು ವ್ಯಕ್ತಪಡಿಸುವ ವ್ಯಂಗ್ಯಮಿಶ್ರಿತ ನಿರಾಸೆಯ ಪ್ರತಿಬಿಂಬವಾಗಿದೆ. ಈ ಪದವನ್ನು ಹಿಂದೆ ಕೂಡ ಬಿಎಸ್‌ಎನ್‌ಎಲ್ ಸೇವೆಗಳ ಕುಸಿತದ ವಿರುದ್ಧ ನಡೆದ ಹಲವು ಪ್ರತಿಭಟನೆಗಳಲ್ಲಿ ಬಳಸಲಾಗಿದೆ.

ನೆಟ್‌ವರ್ಕ್ ಸಂಪೂರ್ಣ ಸ್ಥಗಿತಗೊಂಡಂತೆಯೇ ಇರುವ ಪರಿಸ್ಥಿತಿಯಿಂದ ದಿನನಿತ್ಯದ ಕೆಲಸಗಳು, ಆನ್‌ಲೈನ್ ಸೇವೆಗಳು, ವಿದ್ಯಾರ್ಥಿಗಳ ಅಧ್ಯಯನ ಹಾಗೂ ರೈತರ ಸಂಪರ್ಕ ವ್ಯವಸ್ಥೆ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ಈ ಪ್ಲೆಕ್ಸ್ ಅಳವಡಿಸಿರುವ ಸಾಧ್ಯತೆಯಿದೆ.

ವರದಿ : ರಫಿ ರಿಪ್ಪನ್ ಪೇಟೆ 
Previous Post Next Post