ಅಕ್ರಮ ಮರಳಿನ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ ತಹಸೀಲ್ದಾರ್ ರಂಜಿತ್ - 20 ಲಾರಿ ಲೋಡ್ ಮರಳು ಜಪ್ತಿ
ತೀರ್ಥಹಳ್ಳಿ : ತಾಲ್ಲೂಕಿನ ಮಂಡಗದ್ದೆ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 20 ಲಾರಿ ಲೋಡ್ಗಿಂತ ಹೆಚ್ಚಿನ ಮರಳನ್ನು ತಹಸೀಲ್ದಾರ್ ರಂಜಿತ್ ಅವರ ನೇತೃತ್ವದಲ್ಲಿ ಇಂದು ದಾಳಿ ನಡೆಸಿ ಜಪ್ತಿ ಮಾಡಲಾಯಿತು.
ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಕುರಿತು ಮಾಹಿತಿ ದೊರೆತ ಹಿನ್ನೆಲೆ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮರಳನ್ನು ವಶಕ್ಕೆ ಪಡೆಯಲಾಯಿತು. ಅಕ್ರಮ ಮರಳು ಸಾಗಣೆ ಮತ್ತು ಸಂಗ್ರಹದ ವಿರುದ್ಧ ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದು ಗಮನಾರ್ಹವಾಗಿದೆ.
ಇದಕ್ಕೂ ಮುನ್ನ ನಿನ್ನೆ ಅಗ್ರಹಾರ ಹೋಬಳಿಯ ಅಗಳಬಾಗಿಲು ಗ್ರಾಮದಲ್ಲಿಯೂ ಸುಮಾರು 150 ಟನ್ಗಿಂತ ಅಧಿಕ ಅಕ್ರಮ ಮರಳನ್ನು ಜಪ್ತಿ ಮಾಡಲಾಗಿತ್ತು. ಎರಡು ದಿನಗಳಲ್ಲಿ ನಡೆದ ನಿರಂತರ ಕಾರ್ಯಾಚರಣೆಗಳಿಂದ ಅಕ್ರಮ ಮರಳು ಮಾಫಿಯಾಗೆ ತೀವ್ರ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
“ಸರ್ಕಾರದ ಆಸ್ತಿಯನ್ನು ದೋಚಲು ಯತ್ನಿಸುವವರ ವಿರುದ್ಧ ಯಾವುದೇ ರೀತಿಯ ಸಡಿಲಿಕೆ ಇರುವುದಿಲ್ಲ. ಅಕ್ರಮ ಚಟುವಟಿಕೆಗಳ ವಿರುದ್ಧ ಮುಂದೆಯೂ ನಿರಂತರ ದಾಳಿ ನಡೆಸಲಾಗುವುದು” ಎಂದು ತಹಸೀಲ್ದಾರ್ ರಂಜಿತ್ ಎಚ್ಚರಿಕೆ ನೀಡಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ